ಅರಿವು ಕಾರ್ಯಕ್ರಮಗಳು

ಯುವ ಸ್ಪಂದನ ಕಾರ್ಯಕ್ರಮದ ಮಾಹಿತಿ ಮತ್ತು ಸೇವೆಗಳ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅರಿವು ಕಾರ್ಯಕ್ರಮಗಳನ್ನು ನಡೆಸಲಾಗುವುದು.

ಯುವ ಸ್ಪಂದನದ ಅರಿವು ಕಾರ್ಯಕ್ರಮವನ್ನು ಯಾರು ನಡೆಸುತ್ತಾರೆ?
ಯುವಪರಿವರ್ತಕರು ಅರಿವು ಕಾರ್ಯಕ್ರಮವನ್ನು ನಡೆಸುತ್ತಾರೆ.

ಯುವಪರಿವರ್ತಕರು ಅರಿವು ಕಾರ್ಯಕ್ರಮವನ್ನು ಯಾರಿಗೆ ನಡೆಸುತ್ತಾರೆ?
ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಮುದಾಯದ ಜನಸಾಮಾನ್ಯರಿಗೆ

ಯುವಪರಿವರ್ತಕರು ಅರಿವು ಕಾರ್ಯಕ್ರಮವನ್ನು ಏಕೆ ನಡೆಸುತ್ತಾರೆ?

  • ಯುವಕರ ಮೇಲೆ ಪರಿಣಾಮ ಬೀರುವ ಎಲ್ಲಾ ಸಮಸ್ಯೆಗಳ ಬಗ್ಗೆ ಯುವಜನರಿಗೆ ಹಾಗೂ ಅವರ ಕುಟುಂಬದವರಿಗೆ ಅರಿವು ಮೂಡಿಸಲು
  • ಯುವಕರ ಎಲ್ಲಾ ಸಮಸ್ಯೆಗಳಿಗೆ ಮಾರ್ಗದರ್ಶನ ನೀಡಲು ಯುವಸ್ಪಂದನ ಕೇಂದ್ರವಿದೆ ಎಂದು ಅರಿವು ಮೂಡಿಸಲು

ಅರಿವು ಕಾರ್ಯಕ್ರಮದ ನಂತರ ಏನಾಗುತ್ತದೆ?
ಯುವಜನರ ಎಲ್ಲಾ ಸಮಸ್ಯೆಗಳಿಗೆ ಬೆಂಬಲ ಮತ್ತು ಮಾರ್ಗದರ್ಶನವನ್ನು ಪಡೆಯಲು ಯುವಸ್ಪಂದನ ಕೇಂದ್ರವನ್ನು ಸಂಪರ್ಕಿಸುವುದಾಗಿದೆ.

ಯುವಪರಿವರ್ತಕರು ಅರಿವು ಕಾರ್ಯಕ್ರಮವನ್ನು ಎಲ್ಲಿ ನಡೆಸುತ್ತಾರೆ
ರಾಜ್ಯಾದ್ಯಂತ ಇರುವ ಎಲ್ಲಾ ಶಾಲಾ-ಕಾಲೇಜುಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ಹಾಗೂ ಸಮುದಾಯದಲ್ಲಿ ಅರಿವು ಕಾರ್ಯಕ್ರಮವನ್ನು ನಡೆಸುತ್ತಾರೆ.

ನಿಮ್ಮ ಶಾಲಾ-ಕಾಲೇಜು, ಸಂಘ-ಸಂಸ್ಥೆಗಳಲ್ಲಿ ಅರಿವು ಕಾರ್ಯಕ್ರಮವನ್ನು ನಡೆಸಲು ಇಚ್ಚಿಸುವಿರಾ? ಅರಿವು ಕಾರ್ಯಕ್ರಮವನ್ನು ಆಯೋಜಿಸಲು ಇಲ್ಲಿ ಕ್ಲಿಕ್ ಮಾಡಿ

ವೈಯಕ್ತಿಕ ಬೆಂಬಲ/ಸಮಾಲೋಚನಾ ಸೇವೆಗಳು

ಯುವಸ್ಪಂದನ ಕೇಂದ್ರದಲ್ಲಿ ಮಾರ್ಗದರ್ಶನ, ಬೆಂಬಲ ಹಾಗೂ ಸಮಾಲೋಚನಾ ಸೇವೆಗಳನ್ನು ನೀಡಲಾಗುವುದು.

ಬೆಂಬಲ ಮತ್ತು ಮಾರ್ಗದರ್ಶನವನ್ನು ಯಾರು ಪಡೆಯಬಹುದು?
ಯುವಜನರು ಮತ್ತು ಯುವಜನರೊಂದಿಗೆ ನಿಕಟ ಒಡನಾಟ ಹೊಂದಿರುವವರು.

ಯಾರು ಬೆಂಬಲ/ಮಾರ್ಗದರ್ಶನವನ್ನು ಒದಗಿಸುತ್ತಾರೆ?
ನಿಮ್ಹಾನ್ಸ್ ಸಂಸ್ಥೆಯಿಂದ ತರಬೇತಿ ಪಡೆದ ಯುವಸಮಾಲೋಚಕರು ಬೆಂಬಲ/ಮಾರ್ಗದರ್ಶನವನ್ನು ಒದಗಿಸುತ್ತಾರೆ.

ಯುವಸ್ಪಂದನ ಕೇಂದ್ರಕ್ಕೆ ಭೇಟಿ ನೀಡಿದಾಗ ಏನಾಗುತ್ತದೆ?
ನಮ್ಮ ಯುವಸಮಾಲೋಚಕರು ಅರ್ಥಿಯ ಸಮಸ್ಯೆಯನ್ನು ಗುರುತಿಸಿ, ಇದಕ್ಕೆ ಕೇಂದ್ರದಲ್ಲೇ ಮಾರ್ಗದರ್ಶನ ನೀಡಬಹುದಾ ಅಥವಾ ನಮ್ಮ ಸಂಪನ್ಮೂಲ ಕ್ರೂಢೀಕರಣದ ಮಾಹಿತಿಯನ್ನು ಬಳಸಿ ರೆಫರ್/ಉಲ್ಲೇಖ ಮಾಡಬಹುದಾ ಎಂದು ಸ್ವ ವಿಮರ್ಶೆ ಮಾಡುತ್ತಾರೆ. ಕೇಂದ್ರದಲ್ಲೇ ಮಾರ್ಗದರ್ಶನ ನೀಡಲು ಸಾಧ್ಯವಿದೇ ಎಂದಲ್ಲಿ ಅರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾರೆ, ಇಲ್ಲವೆಂದ ಪಕ್ಷದಲ್ಲಿ ಹೆಚ್ಚಿನ ಮಾರ್ಗದರ್ಶನಕ್ಕಾಗಿ ಅವರನ್ನು ರೆಫರ್/ಉಲ್ಲೇಖ ಮಾಡಲಾಗುವುದು. ಯುವ ಸ್ಪಂದನ ಕೇಂದ್ರಕ್ಕೆ ಭೇಟಿ ನೀಡುವ ಎಲ್ಲಾ ಅರ್ಥಿಗಳನ್ನು ನಿಯಮಿತವಾಗಿ ಅನುಸರಿಸಲಾಗುತ್ತದೆ. ಮಾರ್ಗದರ್ಶನ ಹಾಗೂ ಅನುಸರಣೆಯ ನಂತರ ನಿಯಮಿತವಾಗಿ ಮತ್ತು ಕ್ರಮಬದ್ಧವಾಗಿ ಅರ್ಥಿಯೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡು ಅವರ ಸಮಸ್ಯೆಯ ಸ್ಥಿತಿಯನ್ನು (ಸುಧಾರಿಸಿದೆ, ಪರಿಹರಿಸಲಾಗಿದೆ, ಹದಗೆಟ್ಟಿದೆ, ಬದಲಾವಣೆ ಇಲ್ಲ) ನಿರ್ಣಯಿಸಿ, ಹೆಚ್ಚಿನ ಮಾರ್ಗದರ್ಶನಕ್ಕೆ ಸೂಕ್ತವಾಗುವಂತೆ ಕ್ರಮ ತೆಗೆದುಕೊಳ್ಳಲಾಗುವುದು.

ನಿಮ್ಮ ಸಮಸ್ಯೆಗಳಿಗೆ ಬೆಂಬಲ/ಮಾರ್ಗದರ್ಶನ ಪಡೆಯಲು ಬಯಸುವಿರಾ? ಮಾರ್ಗದರ್ಶನ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ದೂರವಾಣಿ ಮೂಲಕ ಬೆಂಬಲ

ಸಮಸ್ಯೆ ಹೊಂದಿರುವ ಯುವಕರು ಹಾಗೂ ಯುವಜನರೊಂದಿಗೆ ನಿಕಟ ಒಡನಾಟ ಹೊಂದಿರುವವರು ಯುವಸ್ಪಂದನ ಕೇಂದ್ರಕ್ಕೆ ಕರೆಮಾಡುವ ಮೂಲಕ ದೂರವಾಣಿ ಮುಖಾಂತರ ಮಾರ್ಗದರ್ಶನ/ಬೆಂಬಲವನ್ನು ಪಡೆಯಬಹುದು. ತರಬೇತಿ ಪಡೆದ ಯುವಸಮಾಲೋಚಕರು ದೂರವಾಣಿ ಮುಖಾಂತರ ಬೆಂಬಲ ಹಾಗೂ ಮಾರ್ಗದರ್ಶನವನ್ನು ಒದಗಿಸುತ್ತಾರೆ. ಅರ್ಥಿಯ ಸಮಸ್ಯೆಗೆ ದೂರವಾಣಿ ಮುಖಾಂತರ ಮಾರ್ಗದರ್ಶನ ನೀಡಲಾಗುವುದೇ, ಇಲ್ಲವೇ ಎಂದು ಸ್ವ ವಿಮರ್ಶೆ ಮಾಡಿಕೊಳ್ಳುತ್ತಾರೆ. ಬಳಿಕ, ಅರ್ಥಿಯ ಸಮಸ್ಯೆಗೆ ಹೆಚ್ಚಿನ ಮಾರ್ಗದರ್ಶನದ ಅವಶ್ಯಕತೆಯಿದ್ದಲ್ಲಿ, ನಮ್ಮಲ್ಲಿ ಲಭ್ಯವಿರುವ ಸಂಪನ್ಮೂಲ ಕ್ರೂಢೀಕರಣದ ಮಾಹಿತಿಯನ್ನು ಬಳಸಿ ರೆಫರ್ ಮಾಡಲಾಗುತ್ತದೆ. ಈ ರೀತಿಯಾಗಿ ಎಲ್ಲಾ ಅರ್ಥಿಗಳನ್ನು ನಿಯಮಿತವಾಗಿ ಅನುಸರಿಸಲಾಗುತ್ತದೆ. ಮಾರ್ಗದರ್ಶನ ಹಾಗೂ ಅನುಸರಣೆಯ ನಂತರ ಅರ್ಥಿಯೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡು ಅವರ ಸಮಸ್ಯೆಯ ಸ್ಥಿತಿಯನ್ನು (ಸುಧಾರಿಸಿದೆ, ಪರಿಹರಿಸಲಾಗಿದೆ, ಹದಗೆಟ್ಟಿದೆ, ಬದಲಾವಣೆ ಇಲ್ಲ) ನಿರ್ಣಯಿಸಿ, ಹೆಚ್ಚಿನ ಮಾರ್ಗದರ್ಶನಕ್ಕೆ ಸೂಕ್ತವಾಗುವಂತೆ ಕ್ರಮ ತೆಗೆದುಕೊಳ್ಳಲಾಗುವುದು.

ನಿಮ್ಮ ಸಮಸ್ಯೆಗಳಿಗೆ ದೂರವಾಣಿ ಮುಖಾಂತರ ಬೆಂಬಲ/ಮಾರ್ಗದರ್ಶನ ಪಡೆಯಲು ಬಯಸುವಿರಾ?
ಹೌದು ಎಂದಾದರೆ ಕೆಳಕಂಡ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ
(ದೂರವಾಣಿ ಮುಖಾಂತರ ಮಾರ್ಗದರ್ಶನ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಉಲ್ಲೇಖನಾ ಸೇವೆಗಳು:

ಯುವಸ್ಪಂದನ ಕೇಂದ್ರದಲ್ಲಿ ಮಾರ್ಗದರ್ಶನಕ್ಕೆಂದು ಬರುವ ಕೆಲವು ಅರ್ಥಿಗಳಿಗೆ ಅವರ ಸಮಸ್ಯೆಗೆ ಅನುಗುಣವಾಗಿ ಹೆಚ್ಚಿನ ಮಾರ್ಗದರ್ಶನದ ಅವಶ್ಯಕತೆಯಿದ್ದಲ್ಲಿ, ಅಂತಹ ಅರ್ಥಿಗಳನ್ನು ನಮ್ಮಲ್ಲಿ ಕ್ರೂಢೀಕರಿಸಿರುವ ಸಂಪನ್ಮೂಲಗಳಿಂದ ಅರ್ಥಿಯ ಸಮಸ್ಯೆಗೆ ಅನುಗುಣವಾಗಿ ಸೂಕ್ತವಾದ ಕೇಂದ್ರಕ್ಕೆ ಉಲ್ಲೇಖಿಸಲಾಗುತ್ತದೆ. ಪ್ರಕರಣದ ಸಕರಾತ್ಮಕ ಪ್ರಗತಿಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಯುವಸ್ಪಂದನ ಕೇಂದ್ರದಲ್ಲಿ ಮಾರ್ಗದರ್ಶನ ನೀಡುವ ಪ್ರತಿಯೊಂದು ಪ್ರಕರಣವನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ.

ನೀವು ದೀರ್ಘಕಾಲ ಹುಡುಕುತ್ತಿರುವ ಸಂಪನ್ಮೂಲವನ್ನು ಉಲ್ಲೇಖಿಸಲು ನೀವು ಬಯಸುವಿರಾ? ಉಲ್ಲೇಖಿಸಲು ಇಲ್ಲಿ ಕ್ಲಿಕ್ ಮಾಡಿ .

ಸಂಪನ್ಮೂಲ ಕ್ರೂಢೀಕರಣ:

ಸಂಪನ್ಮೂಲ ಕ್ರೂಢೀಕರಣವೆಂಬುದು ಜಿಲ್ಲೆಯೊಳಗಿನ ಯುವಜನರ ವಿವಿಧ ಸಮಸ್ಯೆಗಳಿಗೆ ಸೇವೆಯನ್ನು ಒದಗಿಸುವ ಸಂಸ್ಥೆಗಳು ಮತ್ತು ವೃತ್ತಿಪರರ ಮಾಹಿತಿಯಾಗಿದೆ. ಈ ಸಂಪನ್ಮೂಲಗಳನ್ನು ಅವಶ್ಯಕತೆಯ ಆಧಾರದ ಮೇಲೆ ನಮ್ಮ ಯುವಪರಿವರ್ತಕರು/ಯುವ ಸಮಾಲೋಚಕರು ಹಾಗೂ ಕ್ಷೇತ್ರ ಸಂಪರ್ಕಾಧಿಕಾರಿಗಳು ಮ್ಯಾಪ್ ಮಾಡಿರುತ್ತರೆ. ಈ ಸಂಪನ್ಮೂಲಗಳನ್ನು ಮ್ಯಾಪಿಂಗ್ ಡೈರೆಕ್ಟರಿಯಲ್ಲಿ ಡಿಜಿಟಲೀಕರಿಸಲಾಗಿದೆ. ಅರ್ಥಿಯ ಅಗತ್ಯತೆಗೆ
ಅನುಗುಣವಾಗಿ ಇವುಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಉಲ್ಲೇಖಿಸಲಾಗುತ್ತದೆೆ.
ಅರ್ಥಿಯ ಸಮಸ್ಯೆಗಳ ಆಧಾರದ ಮೇಲೆ ಸಂಪನ್ಮೂಲಗಳನ್ನು ಕ್ರೂಢೀಕರಿಸಲಾಗಿದೆ
 ಇಲ್ಲಿಯವರೆಗೆ ಕರ್ನಾಟಕದಾದ್ಯಂತ ಸುಮಾರು ೩೬೦೦ ಸಾವಿರ ಸಂಸ್ಥೆಗಳು/ವೃತ್ತಿಪರರ ಸಂಪನ್ಮೂಲ ಕ್ರೂಢೀಕರಣ ಮಾಡಲಾಗಿದೆ. ಕ್ರೂಢೀಕರಿಸಿದ ಎಲ್ಲಾ ಸಂಪನ್ಮೂಲಗಳು ಯುವಸ್ಪಂದನ ಕಾರ್ಯಕ್ರಮಡಿಯಲ್ಲಿ ತಿಳಿಸಲಾದ ೬ ಸಮಸ್ಯೆಗಳಿಗೆ (ಶಿಕ್ಷಣ ಮತ್ತು ವೃತ್ತಿ, ಆರೋಗ್ಯ ಮತ್ತು ಜೀವನ ಶೈಲಿ, ಸಂಬಂಧಗಳು , ವ್ಯಕ್ತಿತ್ವ ಬೆಳವಣಿಗೆ, ಲಿಂಗ ಮತ್ತು ಲೈಂಗಿಕತೆ ಹಾಗೂ ಸುರಕ್ಷತಾ ಸಮಸ್ಯೆಗಳು) ಸಂಬಂಧಿಸಿವೆ .

ಯುವ ಸ್ಪಂದನ ಸಂಪನ್ಮೂಲ ಕ್ರೂಢೀಕರಣದಲ್ಲಿ ನಿಮ್ಮ ಸಂಸ್ಥೆಯನ್ನು ಸೇರಿಸಲು ಬಯಸಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿ

ಬಿಕ್ಕಟ್ಟು ನಿರ್ವಹಣೆ:

ಬಿಕ್ಕಟ್ಟು, ಅರ್ಥಿಗೆ ಅಥವಾ ಅವರ ಕುಟುಂಬಕ್ಕೆ/ಸ್ನೇಹಿತರಿಗೆ ನಿರ್ವಹಿಸಲಾಗದ ತೀವ್ರ ತರಹದ ಅಥವಾ ಅಪಾಯಕಾರಿ ಸನ್ನಿವೇಶವಾಗಿದೆ.  ಒತ್ತಡದಿಂದಾಗಿ ಒಬ್ಬ ವ್ಯಕ್ತಿಯು ಬಿಕ್ಕಟ್ಟನ್ನು ಅನುಭವಿಸಬಹುದು. ಬಿಕ್ಕಟ್ಟನ್ನು ಉಂಟುಮಾಡುವ ಕೆಲವು ಘಟನೆಗಳೆಂದರೆ, ಪ್ರೀತಿಪಾತ್ರರ ಸಾವು, ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವುದು, ಕೌಟುಂಬಿಕ ಕಲಹ, ಹಠಾತ್ ಆರ್ಥಿಕ ನಷ್ಟ, ಉದ್ಯೋಗ ಕಳೆದುಕೊಳ್ಳುವುದು ಇತ್ಯಾದಿ.
ಬಿಕ್ಕಟ್ಟಿನ ಸಮಯದಲ್ಲಿ ಒಬ್ಬ ವ್ಯಕ್ತಿ ಅತಿಯಾದ ಭಾವನೆಯನ್ನು ವ್ಯಕ್ತಪಡಿಸಬಹುದು. ಆ ಸಂದರ್ಭದಲ್ಲಿ ಈ ಕೆಳಗಿನ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆಯನ್ನು ತೋರಿಸಬಹುದು.
  • ವಿಪತ್ತು ನಿರ್ವಹಣೆ
  • ಒಬ್ಬಂಟಿ ಹಾಗೂ ಬೆಂಬಲವಿಲ್ಲದ ಭಾವನೆ
  • ಹತಾಶೆ
  • ಆತ್ಮಹತ್ಯೆಯ ಮನೋಭಾವ/ಆಲೋಚನೆಗಳು
  • ಚಡಪಡಿಕೆಯ ಅನುಭವ
  • ದುಃಖ
  • ಅತಿಯಾದ ಹೃದಯ ಬಡಿತ
  • ಕೈ-ಕಾಲುಗಳ ನಡುಕ
  • ನಿದ್ರಾಹೀನತೆ
  • ಸರಿಯಾಗಿ ಆಹಾರ ಸೇವಿಸದಿರುವುದು
  • ಕೋಪ
ಇಂತಹ ಸಂದರ್ಭಗಳಲ್ಲಿ, ಕೆಲವರು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ದುರ್ಬಲರಾಗಿರುತ್ತರೆ. ಈ ಸಂದರ್ಭಗಳಲ್ಲಿ ನೀವು ಎದುರಿಸುತ್ತಿರುವ ಯಾವುದೇ ಬಿಕ್ಕಟ್ಟು ಹಾಗೂ ಅದನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ, ಯುವ ಸ್ಪಂದನ ಕೇಂದ್ರದಲ್ಲಿ ಸಿಗುವ ಸೂಕ್ತ ಮಾರ್ಗದರ್ಶನದ ಮೂಲಕ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.

ತರಬೇತಿ ಕಾರ್ಯಕ್ರಮಗಳು:

ಯುವಸ್ಪಂದನ ಕಾರ್ಯಕ್ರಮದಡಿಯಲ್ಲಿ ವಿವಿಧ ರೀತಿಯ ತರಬೇತಿ ಕಾರ್ಯಕ್ರಮಗಳು ಹಾಗೂ ಕಾರ್ಯಗಾರರಗಳನ್ನು ನಡೆಸಲಾಗುವುದು.

೧. ಯುವ ಪರಿವರ್ತಕರ ಮೂಲ ತರಬೇತಿ
೨. ಯುವ ಪರಿವರ್ತಕರ ಪುನರ್ ತರಬೇತಿ
೩. ಯುವ ಸಮಾಲೋಚಕರ ಮೂಲ ತರಬೇತಿ
೪. ಯುವ ಸಮಾಲೋಚಕರ ಪುನರ್ ತರಬೇತಿ
೫. ಕೋರ್ ಟೀಂ ತರಬೇತಿಗಳು
೬. ವಿಶೇಷ ಕಸ್ಟಮೈಸ್ ಮಾಡಿದ ತರಬೇತಿ
೭. ಜೀವನ ಕೌಶಲ್ಯ ತರಬೇತಿಗಳು

ವ್ಯಕ್ತಿತ್ವ ಬೆಳವಣಿಗೆ :

ವ್ಯಕ್ತಿತ್ವವು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಗುಣಲಕ್ಷಣಗಳ ರೂಪವಾಗಿದೆ. ಆಂತರಿಕ ಮತ್ತು ಬಾಹ್ಯ ಬೇಡಿಕೆಗಳಿಂದಾಗಿ ವ್ಯಕ್ತಿತ್ವದ ಲಕ್ಷಣಗಳು ಬದಲಾಗಬಹುದು. ಆದ್ದರಿಂದ ವ್ಯಕ್ತಿತ್ವವು ಸಂದರ್ಭಗಳಿಗೆ ಹೊಂದಿಕೊಂಡಿರುತ್ತದೆ . ನಾವು ಇನ್ನೊಬ್ಬರ ವ್ಯಕ್ತಿತ್ವವನ್ನು ನಿರೂಪಿಸಲು ಸಾಧ್ಯವಾದ ನಂತರ, ಆ ವ್ಯಕ್ತಿಯು ವಿವಿಧ ಸಂದರ್ಭಗಳಲ್ಲಿ ಹೇಗೆ ವರ್ತಿಸುತ್ತಾನೆ ಎಂಬುದನ್ನು ಅರಿಯಬಹುದು.
ಒಬ್ಬರ ವ್ಯಕ್ತಿತ್ವದ ಕುರಿತು ತಿಳುವಳಿಕೆ ಹೊಂದಿರುವುದು ಅವರೊಂದಿಗೆ ವಾಸ್ತವಿಕ ಹಾಗೂ ಸ್ವೀಕಾರಾರ್ಹ ರೀತಿಯಲ್ಲಿ ವ್ಯವಹರಿಸಲು ಅನುವು ಮಾಡಿಕೊಡುತ್ತದೆ. ಉದಾಹರಣೆಗೆ ನಿಮ್ಮ ಸ್ನೇಹಿತ ಅಥವಾ ಸಹೋದ್ಯೋಗಿ ಆದೇಶಮಾಡುವುದನ್ನು ಇಷ್ಟಪಡದಿದ್ದಾಗ ಅವರೊಂದಿಗೆ ನಯವಾಗಿ ಮಾತನಾಡಿ ನಮ್ಮ ಕಾರ್ಯಸಾಧನೆ ಮಾಡಬೇಕು. ಹಾಗೇಯೇ ಕೀಳರಿಮೆ ಮನೋಭಾವನೆಗಳನ್ನು ಹೊಂದಿರುವವರೊಂದಿಗೆ ಮಾತನಾಡುವಾಗ ಅವರಲ್ಲಿ ಆತ್ಮವಿಶ್ವಾಸ ತುಂಬಿ ಮಾತನಾಡಬೇಕು. ಹೀಗೆ ವ್ಯಕ್ತಿತ್ವ ಬೆಳವಣಿಗೆ ಅಭಿವೃದ್ಧಿ ಪಡಿಸಿಕೊಳ್ಳಲು ಬೆಂಬಲದ ಅವಶ್ಯಕತೆಯಿರುವವರು ನಮ್ಮ ಜಿಲ್ಲಾ ಕ್ರೀಡಾಂಗಣದಲ್ಲಿರುವ ಯುವ ಸ್ಪಂದನ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ.